ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಈಗ ಅಂಧಕಾರಕ್ಕೆ ದೂಡಲ್ಪಟ್ಟಿದೆ. ಕೇಂದ್ರ ಸರ್ಕಾರದ ಈ ಬೃಹತ್ ಆಡಳಿತಾತ್ಮಕ ವೈಫಲ್ಯವನ್ನು ಖಂಡಿಸಿ, ಇದೀಗ ‘ಸ್ವಾಭಿಮಾನಿ ಬಳಗ’ ಸಂಘಟನೆಯು ಕೇಂದ್ರದ ವಿರುದ್ಧ ತೀವ್ರ ಹೋರಾಟಕ್ಕೆ ಧುಮುಕಿದೆ.
ಮೋದಿ ಸರ್ಕಾರದ ದೊಡ್ಡ ವೈಫಲ್ಯ: ‘ಸ್ವಾಭಿಮಾನಿ ಬಳಗ’ ಆಕ್ರೋಶ
”ಸಂವಿಧಾನವೇ ಸಿದ್ಧಾಂತ” ಎಂಬ ದೃಢ ನಿಲುವಿನೊಂದಿಗೆ ದೇಶದಲ್ಲಿ ಅವಕಾಶ ವಂಚಿತರು ಹಾಗೂ ಶೋಷಿತರ ಧ್ವನಿಯಾಗಿ ಮುನ್ನಡೆಯುತ್ತಿರುವ ‘ಸ್ವಾಭಿಮಾನಿ ಬಳಗ’ ಸಂಘಟನೆಯು, ಈ ಪೇಪರ್ ಲೀಕ್ ಹಗರಣವನ್ನು ಮೋದಿ ಸರ್ಕಾರದ ಅತ್ಯಂತ ದೊಡ್ಡ ಆಡಳಿತಾತ್ಮಕ ವೈಫಲ್ಯ ಎಂದು ಕರಿದಿದೆ. ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹದಗೆಡಿಸಿದೆ ಎಂದು ಸಂಘಟನೆಯ ಪ್ರಮುಖರು ಗಂಭೀರವಾಗಿ ಆರೋಪಿಸಿದ್ದಾರೆ.
”ಅಧಿಕಾರದ ಕುರ್ಚಿಯಲ್ಲಿ ಕುಳಿತಿರುವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ”
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ವಾಭಿಮಾನಿ ಬಳಗ, “ದೇಶದಲ್ಲಿ ಇಷ್ಟೆಲ್ಲಾ ದೊಡ್ಡ ಹಗರಣ ನಡೆದರೂ, ತನ್ನ ತಪ್ಪಿನ ಅರಿವಾಗದೇ ಅಧಿಕಾರದ ಕುರ್ಚಿಯಲ್ಲಿ ಭದ್ರವಾಗಿ ಕುಳಿತಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಕಡಾಖಂಡಿತವಾಗಿ ಒತ್ತಾಯಿಸಿದೆ.
ಪ್ರಧಾನಿ ಮೋದಿ ದೇಶದ ಕ್ಷಮೆ ಕೇಳಲಿ!
ಪರೀಕ್ಷಾ ಮಂಡಳಿಗಳ ಮೇಲಿನ ನಿಯಂತ್ರಣ ತಪ್ಪಿರುವುದು ಮತ್ತು ಪೇಪರ್ ಲೀಕ್ ಮಾಫಿಯಾಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಜವಾಬ್ದಾರರು ಎಂದು ಸಂಘಟನೆ ಹೇಳಿದೆ. ಯುವಜನತೆಯ ಭರವಸೆಯನ್ನು ಕಸಿದುಕೊಂಡಿರುವ ಪ್ರಧಾನಿ ಮೋದಿಯವರು ತಕ್ಷಣವೇ ಇಡೀ ದೇಶದ ಹಾಗೂ ನೊಂದ ವಿದ್ಯಾರ್ಥಿ ಸಮುದಾಯದ ಕ್ಷಮೆಯಾಚಿಸಬೇಕು ಎಂದು ದಾವಣಗೆರೆಯಲ್ಲಿ ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.
#NEETLeak ಸಾಮಾಜಿಕ ಜಾಲತಾಣ ಅಭಿಯಾನ ಮತ್ತು ಜನತಾ ಅದಾಲತ್
”ವಿದ್ಯಾರ್ಥಿಗಳ ಭವಿಷ್ಯ ನಮ್ಮ ಹಕ್ಕು, ನಮ್ಮ ನ್ಯಾಯ” ಎಂಬ ಘೋಷಣೆಯೊಂದಿಗೆ ಸ್ವಾಭಿಮಾನಿ ಬಳಗವು ಈಗ ದೇಶಾದ್ಯಂತ ಜನಾಂದೋಲನ ರೂಪಿಸಲು ಸಜ್ಜಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ #NEETLeak ಹ್ಯಾಶ್ಟ್ಯಾಗ್ ಅಡಿಯಲ್ಲಿ ಬೃಹತ್ ಡಿಜಿಟಲ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಲು ಮತ್ತು ಕೇಂದ್ರದ ಜನವಿರೋಧಿ ನೀತಿಗಳನ್ನು ಬಯಲಿಗೆಳೆಯಲು ‘ಜನತಾ ಅದಾಲತ್’ ಕಾರ್ಯಕ್ರಮಗಳ ಮೂಲಕ ಹೋರಾಟವನ್ನು ಹಳ್ಳಿ ಹಳ್ಳಿಗಳಿಗೂ ಕೊಂಡೊಯ್ಯಲು ಸಂಘಟನೆ ನಿರ್ಧರಿಸಿದೆ.
ಪ್ರಾಮಾಣಿಕವಾಗಿ ಶ್ರಮಿಸಿದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಮತ್ತು ಈ ಹಗರಣದ ಹಿಂದಿರುವ ಕಿಂಗ್ಪಿನ್ಗಳಿಗೆ ಕಠಿಣ ಶಿಕ್ಷೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ವಾಭಿಮಾನಿ ಬಳಗ ಎಚ್ಚರಿಸಿದೆ.
