ಆತ್ಮೀಯ ಪ್ರಜ್ಞಾವಂತ ಓದುಗ ಪ್ರಭುಗಳೇ,
ಅಕ್ಷರ ಜ್ಞಾನಿ, ಸ್ವಾಭಿಮಾನಿ ಕನ್ನಡಿಗರಿಗಾಗಿ, ಒಂದು ಕಾಲದಲ್ಲಿ ಕರ್ನಾಟಕ ರಾಜ್ಯದ ರಾಜಧಾನಿಯಾಗಬೇಕಿದ್ದ “ಮಧ್ಯ ಕರ್ನಾಟಕದ ಹೆಮ್ಮೆಯ ದಾವಣಗೆರೆ ಜಿಲ್ಲೆ”ಯಿಂದ ಪ್ರಕಟಗೊಳ್ಳುತ್ತಿರುವ “ಸ್ವಾಭಿಮಾನಿ ಕರ್ನಾಟಕ” ದಿನಪತ್ರಿಕೆಯು ಶೀಘ್ರದಲ್ಲಿಯೇ ನಿಮ್ಮ ಮನ ಮತ್ತು ಮನೆಗಳನ್ನು ತಲುಪಲಿದೆ.

ಆರಂಭಿಕ ಹಂತವಾಗಿ ಪತ್ರಿಕೆಯು ‘ಆನ್ ಲೈನ್ ನ್ಯೂಸ್ ವೆಬ್’ ಮೂಲಕ ನಿಮ್ಮ ಮುಂದೆ ಬರುತ್ತಿದೆ.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಹೆಮ್ಮೆಯ ಭಾರತದ ಸಂವಿಧಾನವು “ಪತ್ರಿಕೆ ಮತ್ತು ಪತ್ರಕರ್ತರಿಗೆ” ತಪ್ಪುಗಳನ್ನು ಪ್ರಶ್ನಿಸುವ ಮಹತ್ತರ ಜವಾಬ್ದಾರಿಯನ್ನು ನೀಡಿದೆ. ಆ ಆಶಯದಂತೆಯೇ, ಜನರ ಧ್ವನಿಯಾಗಿ, ಸಾರ್ವಜನಿಕರ ತೆರಿಗೆ ಹಣದ ಪ್ರತಿಯೊಂದು ಪೈಸೆಯೂ ವ್ಯರ್ಥವಾಗದಂತೆ ಮೂಲಭೂತ ಸೌಲಭ್ಯಗಳಿಗಾಗಿ ಧ್ವನಿ ಎತ್ತುವುದು ನಮ್ಮ ಸಂಕಲ್ಪ. ಜಗತ್ತಿಗೆ ಅನ್ನ ನೀಡುವ ರೈತರು, ದೇಶ ಕಟ್ಟುವ ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಹಕ್ಕುಗಳಿಗಾಗಿ ಶ್ರಮಿಸುವವರ ಧ್ವನಿಯನ್ನು ಆಡಳಿತಗಾರರಿಗೆ ತಲುಪಿಸಲು, ತಪ್ಪೆಸಗುವವರಿಗೆ ನಮ್ಮ ಲೇಖನಿಯ ಮೂಲಕ “ಚಾಟಿ ಏಟು” ಕೊಡುವ ಪ್ರಾಮಾಣಿಕ ಕರ್ತವ್ಯವನ್ನು ಈ ಪತ್ರಿಕೆ ಮಾಡಲಿದೆ.
ನಮ್ಮ ಪತ್ರಿಕೆಯು ಪ್ರಜಾಪ್ರಭುತ್ವದ ಆಶಯಗಳು, ಸಂವಿಧಾನದ ಮಹತ್ವ, ದೇಶದ ನೂತನ ಕಾನೂನುಗಳು (ಬಿ.ಎನ್.ಎಸ್), ಭ್ರಷ್ಟಾಚಾರ ವಿರೋಧಿ ಹೋರಾಟ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆ, ಶಿಕ್ಷಣದ ಮಹತ್ವ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ವಿಶೇಷ ಸುದ್ದಿಗಳು ಮತ್ತು ವೈಚಾರಿಕ ಅಂಕಣಗಳನ್ನು ಪ್ರಕಟಿಸಲಿದೆ.
ಈ ನಿಮ್ಮ ಸ್ವಂತ ಪತ್ರಿಕೆಗೆ ಸಲಹೆ-ಸಹಕಾರ ನೀಡಿ, ತಿದ್ದಿ-ತೀಡಿ, ಪ್ರೋತ್ಸಾಹಿಸಿ ಬೆಳೆಸುವುದು ಪ್ರತಿಯೊಬ್ಬ ಸ್ವಾಭಿಮಾನಿ ಪ್ರಜೆಯ ಕರ್ತವ್ಯವಾಗಿದೆ. ದಿನಕಳೆದಂತೆ ನಿಮ್ಮೆಲ್ಲರ ಸಹಕಾರ ಮತ್ತು ಹೊಸ ಬದಲಾವಣೆಗಳೊಂದಿಗೆ “ಸ್ವಾಭಿಮಾನಿ ಕರ್ನಾಟಕ”ಕ್ಕೆ ಮತ್ತಷ್ಟು ಮೆರಗು ನೀಡುತ್ತಾ ಸಾಗೋಣ.
ಹೃತ್ಪೂರ್ವಕ ಸ್ವಾಗತ ಕೋರುವವರು:
ಸ್ವಾಭಿಮಾನಿ ಕರ್ನಾಟಕ ಬಳಗ
